ವಿದ್ಯಾರ್ಥಿನಿ ಆತ್ಮಹತ್ಯೆ: ಮನನೊಂದ ತಂದೆ ಹೃದಯಾಘಾತದಿಂದ ಮೃತ | ಜನತಾ ನ್ಯೂಸ್
ಮಂಡ್ಯ : ಇಂದು ವಿಶ್ವ ಅಪ್ಪಂದಿರ ದಿನ. ಅಪ್ಪನಿಗೆ ಶುಭಾಶಯ ಹೇಳಬೇಕಾದ ಮಗಳು ನೇಣಿಗೆ ಶರಣಾಗಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದೆ.
ಮಗಳ ಆತ್ಮಹತ್ಯೆಯಿಂದ ಆಘಾತಗೊಂಡ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಜಣ್ಣ (65) ಹಾಗೂ ಪುತ್ರಿ ಬಾಂಧವ್ಯ (17) ಸಾವನ್ನಪ್ಪಿದವರು.
ಪಿಯು ಕಾಲೇಜು ಸೇರಿಸುವ ವಿಚಾರದಲ್ಲಿ ತಂದೆಯ ಜೊತೆ ಮುನಿಸಿಕೊಂಡಿದ್ದ ಬಾಂಧವ್ಯ ಬೆಳಗಿನ ಜಾವ ಮನೆಯಲ್ಲೇ ನೇಣಿಗೆ ಶರಣಾಗಿದ್ದಳು. ಮಗಳ ಸಾವನ್ನು ನೊಡಿದ್ದ ತಂದೆ ರಾಜು (65) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮಗಳ ಅಂತ್ಯಸಂಸ್ಕಾರದ ಸಿದ್ಧತೆಯಲ್ಲಿದ್ದಾಗ ತಂದೆ ರಾಜಣ್ಣ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ತಂದೆ , ಮಗಳ ಅಂತ್ಯಕ್ರಿಯೆ ತಗಳವಾದಿ ಗ್ರಾಮದಲ್ಲಿ ನಡೆಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರಾಜಣ್ಣನಿಗೆ 4 ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದಾನೆ. ನಾಲ್ಕನೆಯವಳಾದ ಬಾಂಧವ್ಯ ಬನ್ನೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬಾಂಧವ್ಯಳನ್ನು ತಂದೆ ಸರಕಾರಿ ಕಾಲೇಜಿಗೆ ಸೇರಿಸಿದ್ದರು. ಆದರೆ ತನ್ನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲಿಲ್ಲವೆಂದು ಖಿನ್ನತೆಗೊಳಗಾಗಿದ್ದ ಬಾಂಧವ್ಯ ರವಿವಾರ ಮುಂಜಾನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.